ಕವನದ ಶೀರ್ಷಿಕೆ : ನಿಲ್ದಾಣ
ರಾತ್ರಿ ಜೊತೆಯಲಿ ಊಟ ಮಾಡಿ
ಕೆನ್ನೆಗೆ ಸಿಹಿ ಮುದ್ರೆಯನ್ನೋತ್ತಿ
ಹೆಜ್ಜೆ ಮೂಡದ ಹಾದಿಯಲಿ
ಬೂಟು ಕಾಲಿನ ನೆರಳಿನಲ್ಲಿ
ರಾತ್ರಿಕೆಲಸಕ್ಕೆ ಹೊರಟಿದ್ದ ರಾಜಕುಮಾರ
ಬಾಳಿನಾಸೆಯ ಬುತ್ತಿ
ಸೆಳೆದಿತ್ತು ಸುಖದ ಅಮಲು
ಮದುವೆಯ ತರಿಳು ತೋರಣದ
ಹಸಿರು ಮಾಸುವ ಮುನ್ನ
ಮೊಗದ ಅರಿಸಿನ ಜಾರುವ ಮುನ್ನ
ರಾಜಕುಮಾರಿಗೆ ಮಾಯದ ನಿದ್ದೆ
ರಿಂಗಣಿಸಿದ ಫೋನು
ಹಾಯ್ ಎಲ್ಲಿದ್ದಿಯಾ?
ನಾವಿಲ್ಲಿದ್ದೇವೆ ಬಂದು ಬಿಡು ಇಲ್ಲಿಗೆ.
ಕೆಲಸಕ್ಕೆಂದು ಹೊರಟ ಕಾಲು
ಹಿಂಬಾಲಿಸಿತ್ತು ಮತ್ತೇನನ್ನೋ
ಹುಟ್ಟುಹಬ್ಬದ ಆಚರಣೆಯ
ಗುಂಗಿನಲ್ಲಿ ಮೈಯೊಳಗೆ ಇಳಿದಿದ್ದು
ಸುರಪಾನದ ಅಮಲು
ಮತ್ತೊಮ್ಮೆ ರಿಂಗಣಿಸಿತ್ತು ಅದೇ ಫೋನ್!
ಬೇಗ ಬಾ ನಿನಗಾಗಿ ಕಾಯುತ್ತಿದ್ದಾರೆ ಇಲ್ಲಿ
ಹೊರಟ ಹೊರಟ ನೆತ್ತಲೋ
ಅತಿವೇಗದಲಿ, ಸುಮ್ಮನೆ ಬಿಟ್ಟಿತೇ?
ಬಂದರು ಯಕ್ಷ ಕಿನ್ನರ ಪ್ರೇತಗಳು
ಪೀಕು ದ್ವನಿಯ ಮಾಡುತ್ತ
ಕರೆದೊಯ್ದರು ಮತ್ತೆ ಕರೆತರಲಾಗದೂರಿಗೆ
ಮೊಲ್ಲೆ ಮಲ್ಲಿಗೆಯ ಘಮಲು
ಆರಿರದ ಮೈಗೆ ರಕ್ತದ ನಾಥ
ಹೊತ್ತೊಯ್ದರು
ಅನಾಥ ಶವದಂತೆ ಬಿದ್ದ ಬಾಡಿಯನು
ಇಹಲೋಕದ ಅಪತ್ಭಾಂದವರು
ಆಪತ್ತಿಗೆ ಆಹೊತ್ತಿಗೆ ಇದ್ದು ಇಲ್ಲದಂತಿದ್ದವರು
ಇರಳು ಶಯ್ಯಾಗೃಹದಲ್ಲಿ
ಮಲ್ಲಿಗೆ ಹಾರವಿಲ್ಲ
ಊದುಬತ್ತಿಯ ಸುಗಂಧವಿಲ್ಲ
ತಲೆಗೆ ತುಪ್ಪಳದ ತಲೆದಿಂಬಿಲ್ಲ
ಆ ನತದೃಷ್ಟ ರಾಜಕುಮಾರನಿಗೀಗ
ಮಾಯ ನಿದ್ರೆ
ಹಗಲು ಕಾಗೆ ಗುಬ್ಬಿಗಳಿರದ ನೀರವತೆ
ಚಂದ್ರ ತಾರೆಗಳಿರದ
ತಂಪು ಗಾಳಿಯಿರದ
ಸುಡುಬಿಸಿಲ ಸ್ವರ್ಗದಲ್ಲಿ
ಅವಳು ಎದ್ದಿದ್ದಾಳೆ
ಅವನ ಬರುವಿಕೆಗಾಗಿ ಕಾಯುತ್ತಾ
ಗುಡಿಸಿ ಬೆಳಗಿ ತೊಳೆದು
ಸಹಜದೊಲವುಗಳ ಹಾಡು ಗುನುಗುತ್ತಾ
ಫೋನಿಗೆ ಕೈ ಹಾಯಿಸಿದಳು ರೀ.. ಎಲ್ಲಿದ್ದೀರಿ
ಫೋನಿನಲ್ಲಿ ಕೇಳಿಸಿದ ಧ್ವನಿ ಅವನದಾಗಿರಲಿಲ್ಲ
ಶವಾಗಾರದಲ್ಲಿ ಬಿದ್ದಿದೆ ಹೆಣ ಬನ್ನಿ
ಎಂದಾಗ ಅವಳೆದೆಯ ರಕ್ತ ಹಣೆಯಿಂದ ಜಾರಿತ್ತು
ಸಾಕಿನ್ನೆಷ್ಟು ಅತ್ತಿಯ ?
ಬಂದರು ಹೊರಟರು ಬಿಗರು ಬಿಜ್ಜರು
ಬದುಕಿನ್ನು ನಿಂತಿಲ್ಲ ಅವಳೆದುರು
ಸಾಗಬೇಕಿದೆ ತನ್ನ ನಿಲ್ದಾಣ ಬರುವವರೆಗೆ
ಎದ್ದಳು ರಾಜಕುಮಾರಿ ಆ ಮಾಯಾ ನಿದ್ರೆಯಿಂದ
ಕವಯತ್ರಿ : ಶೃತಿ ಮೇಲುಸೀಮೆ
Comments
Post a Comment